ಇವ್ಯಾಂಗಲಿಸ್ಟಾ ಟಾರಿಸಲಿಯವರು ಒಬ್ಬ ಯುವವಿಜ್ಞಾನಿ. ಇವರು ಅಕ್ಟೋಬರ್ ೧೫,೧೬೦೮ರಂದು ಇಟಲಿಯ ಫೇನ್ಜಾ ಎಂಬಲ್ಲಿ ಜನಿಸಿದರು. ಭಾರತೀಯ ವಿಜ್ಞಾನಿ, ಶ್ರೀನಿವಾಸ ರಾಮಾನುಜನ್ ರಂತೆ ವೈಜ್ಞಾನಿಕ ಕ್ಷೇತ್ರದಲ್ಲಿ ಅಪಾರ ಕೀರ್ತಿಯನ್ನು ಗಳಿಸಿ,ಚಿಕ್ಕ ವಯಸ್ಸಿನಲ್ಲಿಯೇ ಅಂದರೆ ೩೯ನೆಯ ಪ್ರಾಯದ ವಯಸ್ಸಿನಲ್ಲಿ ತೀರಿಕೊಂಡರು. ವಿಖ್ಯಾತ ವಿಜ್ಞಾನಿಯಾಗಿರುವ ಇವರು ಗೆಲಿಲಿಯೋ ಗೆಲಿಲಿ ಅವರ ಶಿಷ್ಯರಾಗಿದ್ದಾರೆ. = ವಿದ್ಯಾಭ್ಯಾಸ = ಇವ್ಯಾಂಗಲಿಸ್ಟಾ ಟಾರಿಸಲಿಯವರು ತನ್ನ ೧೯ನೇ ವಯಸ್ಸಿನಲ್ಲಿಯೇ ಅಂದರೆ ೧೬೨೭ರ ವೇಳೆಗೆ ರೋಮ್ ವಿಶ್ವವಿದ್ಯಾನಿಲಯದಿಂದ ಪದವಿ ಗಳಿಸಿದರು. ಇವರ ಪ್ರತಿಭೆಯನ್ನು ಗುರುತಿಸಿ,ಅದೇ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕನಾಗಿ ನೇಮಕಗೊಳಿಸಲಾಯಿತು. ಅದಲ್ಲದೆ ಇವರೊಬ್ಬ ವೈಜ್ಞಾನಿಕ ಸಾಹಿತಿಯೂ ಹೌದು. = ವೃತ್ತಿ ಜೀವನ = ಇವರಿಗೆ ವಿಶ್ವಖ್ಯಾತಿಯನ್ನು ದೊರಕಿಸಿ ಕೊಟ್ಟದ್ದು ಬ್ಯಾರೋಮೀಟರ್(ವಾಯು ಮಾಪಕ) ಆವಿಷ್ಕಾರ. ಆದರೆ ಬ್ಯಾರೋಮೀಟರ್ ಕಂಡುಹಿಡಿದ ಪ್ರಸಂಗ ಸ್ವಾರಸ್ಯಕರವಾಗಿದೆ. ಇಟಲಿಗೆ ಸೇರಿದ ಟಸ್ಕನಿಯ ಗ್ರಾಂಡ್ ಡ್ಯೂಕ್ನ್ ಅರಮನೆಯ ಮುಂದೆ ಒಂದು ಬಾವಿ. ಅದರಲ್ಲಿ ನೀರು ನೆಲ ಮಟ್ಟಕ್ಕಿಂತಲೂ ೪೦ ಅಡಿಗಳಷ್ಟು ಕೆಳಗಿತ್ತು. ನೀರನ್ನು ನೆಲಮಟ್ಟಕ್ಕೆ ತರಲು ಕೊಳವೆಯೊಂದನ್ನು ತೋಡಿದ ಬಾವಿಯಲ್ಲಿ ಮುಳುಗಿಸಿದ್ದ ಒಂದು ಕೈಪಂಪನ್ನು ಹಾಕಲಾಯಿತು. ಪಂಪಿನ ಹಿಡಿಕೆಯನ್ನು ಎಷ್ಟೇ ಒತ್ತಿದರೂ,ನೀರು ೩೩ ಅಡಿಗಳಿಗಿಂತ ಮೇಲಕ್ಕೆ ಬರುತ್ತಿರಲಿಲ್ಲ. ಎಲ್ಲರಿಗೂ ಕೈಪಂಪಿನಲ್ಲಿ ಏನೋ ದೋಷ ಇರಬೇಕೆಂದು ಅನ್ನಿಸಿತು. ಪರಿಣಿತರು ಪಂಪನ್ನು ತುಂಬಾ ಎಚ್ಚರಿಕೆಯಿಂದ ಪರಿಶೀಲಿಸಿದಾಗ,ಅಂತಹ ದೋಷವೇನು ಅದರಲ್ಲಿದ್ದಂತೆ ಕಂಡುಬರಲಿಲ್ಲ. ವಿಚಾರವನ್ನು ತಿಳಿದ ಡ್ಯೂಕ್ ಈಗ ಸಮಸ್ಯೆಯನ್ನು ಬಗೆಹರಿಸಲು, ತನ್ನ ಬಳಿ ಗಣಿತತಜ್ಞ ಎನಿಸಿದ ಗೆಲಿಲಿಯೋಗೆ ತಿಳಿಸಿದರು. ಆದರೆ ಗೆಲಿಲಿಯೋಗೆ ತುಂಬಾ ವಯಸ್ಸಾಗಿತ್ತು.ಕಣ್ಣುಗಳೂ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಆದ್ದರಿಂದ ಈ ಕಾರ್ಯವನ್ನು ತನ್ನ ಶಿಷ್ಯನಾದ ಟಾರಿಸಲಿಗೆ ಒಪ್ಪಿಸಿದರು. ಟಾರಿಸಲಿ ಲೆಕ್ಕಾಚಾರದ ಗಣಿತತಜ್ಞನೇ ಆಗಿದ್ದರು. ವೈಜ್ಞಾನಿಕ ವಿಚಾರಗಳಲ್ಲಿ ಗಣಿತದ ಲೆಕ್ಕಾಚಾರವನ್ನು ಕರಾರುವಕ್ಕಾಗಿ ಹಾಕಬಲ್ಲವನೆನಿಸಿದ್ದರು. ಅವರಿಗೆ ಭಾರವಾದ ದ್ರವವನ್ನು ಹಗುರವಾದ ದ್ರವದಂತೆ ಅಷ್ಟೇ ಎತ್ತರಕ್ಕೆ ಏರಿಸುವುದು ಕಷ್ಟ ಸಾಧ್ಯ ಎಂಬ ವಿಚಾರವೂ ತಿಳಿದಿತ್ತು. ನೀರಿಗಿಂತಲೂ ತೂಕದಲ್ಲಿ ಮೂರುವರೆಯಷ್ಟು ಹೆಚ್ಚು ತೂಕದ ಪಾದರಸವನ್ನು ಪ್ರಯೋಗದಲ್ಲಿ ಬಳಸಿಕೊಳ್ಳಲು ನಿರ್ಧರಿಸಿದರು. ತನ್ನ ತೀಕ್ಷ್ಣ ಬುದ್ಧಿಶಕ್ತಿಯಿಂದ ೩೩ ಅಡಿ ಅಳತೆಯನ್ನು ೧೩.೫ರಿಂದ ಭಾಗಿಸಿದರೆ ಪಾದರಸವು ಸುಮಾರು ೩೦ ಅಂಗುಲದಷ್ಟು ಎತ್ತರದ ಸ್ಥಾನಕ್ಕೆ ಬರುವುದೆಂಬುದನ್ನು ಊಹಿಸಿದರು. ಈ ಲೆಕ್ಕಾಚಾರಕ್ಕೆ ಅನುಗುಣವಾಗಿ ಪ್ರಯೋಗಕ್ಕೆ ಬಳಸುವ ಗಾಜಿನ ನಳಿಕೆಯನ್ನು ಒಂದು ಗಜಕ್ಕೆ ಇಳಿಸಿದರು. ಪ್ರಯೋಗದ ಸಲುವಾಗಿ,ಸುಮಾರು ಒಂದು ಗಜ ಉದ್ದದ,ತುದಿ ಮುಚ್ಚಲಾಗಿರುವ ಒಂದು ಗಾಜಿನ ನಳಿಕೆಯನ್ನು ತೆಗೆದುಕೊಂಡರು. ಅದರಲ್ಲಿ ಲೆಕ್ಕಾಚಾರದಂತೆ ಪಾದರಸವನ್ನು ತುಂಬಿದರು. ತೆರೆದಿದ್ದ ನಳಿಕೆಯ ತುದಿಯನ್ನು ತನ್ನ ಹೆಬ್ಬೆರಳಿನಿಂದ ಅದುಮಿ ಹಿಡಿದರು.ಪಾದರಸ ತುಂಬಿದ ಬಟ್ಟಲಲ್ಲಿ ಅದನ್ನು ಮುಳುಗಿಸಿದರು. ಪಾದರಸದ ಮಟ್ಟದ ಕೆಳಗಿನಿಂದ ನಳಿಕೆಯನ್ನು ತೆರೆದಿದ್ದ ನಳಿಕೆಯ ಭಾಗವನ್ನು ಮುಚ್ಚಿದ್ದ ಅವರ ಹೆಬ್ಬೆರಳನ್ನು ತೆರೆದಾಗ ನಳಿಕೆಯಲ್ಲಿದ್ದ ಪಾದರಸ ಕೆಳಗಿಳಿದು,ಸುಮಾರು ೩೦ ಅಂಗುಲಗಳ ಮಟ್ಟಕ್ಕೆ ನಿಂತ್ತಿತ್ತು. ನಳಿಕೆಯ ಮೇಲಿನ ಭಾಗ ಖಾಲಿಯಾಗಿತ್ತು.ಈ ರೀತಿ ಖಾಲಿಯಾದ ಭಾಗವನ್ನು ಟಾರಿಸಲಿ ನಿರ್ವಾತ ಎಂದು ಕರೆಯಲಾಯಿತು. ಈ ಪ್ರಯೋಗದ ಮೂಲಕ ಕೈಪಂಪಿನಿಂದ ನೀರು ಸುಮಾರು ೩೦ ಅಡಿಗಳಿಗಿಂತಲೂ ಹೆಚ್ಚು ಮೇಲೇರುವುದಿಲ್ಲ ಎಂಬ ವೈಜ್ಞಾನಿಕ ಸಿದ್ಧಾಂತವನ್ನು ಸಮರ್ಥಿಸಿದಂತಾಯಿತು. ಪ್ರಯೋಗದ ಈ ಉಪಕರಣಗಳೇ ಭಾರಮಾಪಕದ ತಯಾರಿಕೆಗೆ ಅನುಕೂಲ ಆಯಿತು. ಈ ಪ್ರಯೋಗದ ಆಧಾರದಿಂದಲೇ ಪ್ಯಾಸ್ಕಲ್ ಗಾಳಿ ತೂಕವನ್ನು ಹೊಂದಿದೆ ಎಂಬ ಗೆಲಿಲಿಯೋನ ಸಿದ್ಧಾಂತವನ್ನು ಸಮರ್ಥಿಸಿದರು. ಈ ಬ್ಯಾರೋಮೀಟರ್ ಇಂದು ಹವಾಮಾನವನ್ನು ನಿಖರವಾಗಿ ತಿಳಿಯಲು ಸಹಕಾರಿಯಾಗಿದೆ. ಈ ವಿಜ್ಞಾನಿಯೇ ಮುಂದೆ ದೂರದರ್ಶಕ ಹಾಗೂ ಸೂಕ್ಷ್ಮದರ್ಶಕಗಳನ್ನು ವಿನ್ಯಾಸಗೊಳಿಸಿದರು. ಹಲವಾರು ದ್ಯುತ್ಯೋಪಕರಣಗಳ ನಿರ್ಮಾಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇಟಲಿಯ ಫ್ಲಾರೆನ್ಸ್ ನಗರದಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಧಿಸಿದ ಒಂದು ಅಪೂರ್ವವೆನಿಸಿದ ಒಂದು ದೂರದಶರ್ಕಕ ಮಸೂರವಿದೆ. ಇದರ ವ್ಯಾಸ ನಾಲ್ಕು ಅಂಗುಲಗಳಿಗಿಂತಲೂ ಸ್ವಲ್ಪ ಹೆಚ್ಚು. ಇದನ್ನು ಸ್ವತಃ ಟಾರಿಸಲಿಯವರು ೧೬೪೬ರಲ್ಲಿ ನಿರ್ಮಿಸಿದ್ದಾರೆ. = ಪ್ರಕಟಣೆ = ಎ ಕಾಮೆಂಟರಿ ಆನ್ ದಿ ವರ್ಕ್ ಆಫ್ ಗೆಲಿಲಿಯೋ = ನಿಧನ = ಇವ್ಯಾಂಗಲಿಸ್ಟಾ ಟಾರಿಸಲಿ ಅಕ್ಟೋಬರ್ ೨೫,೧೬೪೭ರಲ್ಲಿ ನಿಧನರಾದರು. = ಉಲ್ಲೇಖಗಳು =